ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಪವಿತ್ರ ರಂಝಾನ್ ತಿಂಗಳಲ್ಲಿ ಬದುಕು ಧನ್ಯಗೊಳಿಸುವ ಸಲುವಾಗಿ ತಝ್ಕಿಯತ್ ನೈಟ್ ಕಾರ್ಯಕ್ರಮ ಉಳ್ಳಾಲದ ಮಂಚಿಲ ಜುಮಾ ಮಸೀದಿಯಲ್ಲಿ ನಡೆಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಂಚಿಲ ಜುಮಾ ಮಸೀದಿಯ ಖತೀಬರಾದ ಹಸನ್ ಮುಬಾರಕ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆತ್ಮ ಸಂಶುದ್ಧವಾಗಿದ್ದರೆ ಮಾತ್ರ ಮುಸ್ಲಿಮನ ಸರ್ವ ಇಬಾದತುಗಳು ಸ್ವೀಕಾರ್ಹ ಯೋಗ್ಯವಾಗಲು ಸಾಧ್ಯ. ಆತ್ಮ ಶುದ್ಧಿಯಿಲ್ಲದೆ ನಿರ್ವಹಿಸಲ್ಪಡುವ ಇಬಾದತುಗಳು ನಿಷ್ಫಲ ಅಂದರು. ಆತ್ಮ ಶುದ್ಧೀಕರಣ ವಿಷಯದಲ್ಲಿ ಚೊಂಬುಗುಡ್ಡೆ ಜುಮಾ ಮಸೀದಿಯ ಖತೀಬರಾದ ಹಂಝ ಮದನಿ ಗುರುವಾಯನಕೆರೆ ತರಗತಿ ನಡೆಸಿ ಹೇಳಿದರು. ಪ್ರವಾದಿ ಸ.ಅ ತನ್ನ ಅನುಯಾಯಿಗಳಾದ ಸ್ವಹಾಬಿಗಳೊಂದಿಗೆ ಒಮ್ಮೆ ಹೇಳಿದರು. ""ಸ್ವಹಾಬಿಗಳೇ ನೀವು ನಿಮ್ಮ ಶರೀರದ ಎರಡು ಅಂಗಗಳಾದ ನಾಲಗೆ ಮತ್ತು ಗುಪ್ತಾಂಗದ ಮೂಲಕ ಯಾವುದೇ ತಪ್ಪು ನಡೆಸುವುದಿಲ್ಲ ಎಂದು ಮಾತುಕೊಟ್ಟರೆ ನಿಮಗೆ ನಾನು ಸ್ವರ್ಗವನ್ನು ವಾಗ್ದಾನ ಮಾಡುತ್ತೇನೆ"" ನಾಲಗೆ ಮತ್ತು ಗುಪ್ತಾಂಗದ ಮೂಲಕ ತಪ್ಪು ಸಂಭವಿಸುವುದರಿಂದ ಹೇಗೆ ಅವುಗಳನ್ನು ಕಾಪಾಡಬಹುದು, ಅವುಗಳನ್ನು ಹೇಗೆ ಸಂಶುದ್ಧಗೊಳಿಸಬಹುದು ಎಂಬುದನ್ನು ಈ ಹದೀಸನ್ನು ವ್ಯಾಖ್ಯಾನಿಸಿ ಅಬುಲ್ಲಯ್ಸ್ ಸಮರ್ಖಂದೀ ರಹಿಮಹುಲ್ಲಾಹ್ ರಂತಹ ಮಹಾತ್ಮರು ಹೇಳುತ್ತಾರೆ. ತನ್ನ ನಾಲಗೆಯಿಂದ ಜೀವನದಲ್ಲಿ ಒಮ್ಮೆಯೂ ಸುಳ್ಳು ಹೇಳದಿರುವುದು, ಪರದೂಷಣೆ, ಪರನಿಂದನೆ ಮಾಡದಿರುವುದು, ಅನಗತ್ಯ ಚರ್ಚೆಗಳಲ್ಲಿ ಭಾಗಿಯಾಗದಿರುವುದು, ಕ್ರತಕ ಸುದ್ದಿಗಳನ್ನು ಸ್ರಷ್ಟಿ ಮಾಡಿ ಗೊಂದಲ ಉಂಟು ಮಾಡದಿರುವುದು. ನಾಲಗೆಯ ಮೂಲಕ ಅಲ್ಲಾಹನ ದ್ಸಿಕ್ರ್ ನಲ್ಲಿ ತಲ್ಲೀನನಾಗಿರುವುದು, ಕುರಾನ್ ಪಾರಾಯಣದ ಮೂಲಕ ಬದುಕನ್ನು ಧನ್ಯಗೊಳಿಸುವುದು, ಜ್ಞಾನ ಬೋಧನೆಯನ್ನು ಪಸರಿಸುವವನಾಗುವುದು. ಈ ರೀತಿಯಾಗಿರಬೇಕು ನಾಲಗೆಯನ್ನು ಸಂಶುದ್ಧಗೊಳಿಸುವುದು ಎಂದು ಮಹಾತ್ಮರು ಕಲಿಸಿ ಕೊಡುತ್ತಾರೆ. ಮುಂದುವರಿದು ಹಂಝ ಮದನಿ ಉಸ್ತಾದರು ಹ್ರದಯ ಶುದ್ಧೀಕರಣ ಹಾಗು ಹ್ರದಯದೊಂದಿಗೆ ಸಂಬಂಧವಿರುವ ಅಂಗಗಳ ಸಂಸ್ಕರಣೆ ಮಾಡುವುದು ಹೇಗೆ ಎಂದು ವಿವರಿಸಿ ಅಲ್ಲಾಹನ ಹಬೀಬ್ ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲೆ ಹೇಳಲ್ಪಡುವ ಸ್ವಲಾತಿನ ಮಹತ್ವವನ್ನು ವಿವರಿಸುತ್ತಾ ಹೇಳಿದರು. ಕಾವ್ಯಗಳಲ್ಲಿ ಸರಿಸಾಟಿಯಿಲ್ಲದ ಅತಿ ಮಹತ್ತರ ಕಾವ್ಯವಾದ ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪ್ರಶಂಸೆ, ಗುಣಗಾನಗಳನ್ನು ತಿಳಿಸುವ ಬುರ್ದಾ ಕಾವ್ಯವನ್ನು ವಿವರಿಸುತ್ತಾ ಮಹಾತ್ಮರು ಹೇಳುತ್ತಾರೆ. ಯಾರಾದರೂ ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲೆ ಸ್ವಲಾತ್ ಹೇಳಿದರೆ ಆ ಸ್ವಲಾತಿನ ಲೆಕ್ಕಾನುಸಾರ ಅಲ್ಲಾಹನು ಮಲಕುಗಳನ್ನು ಸ್ರಷ್ಟಿ ಮಾಡುತ್ತಾನೆ. ಆ ಮಲಕುಗಳು ಪ್ರವಾದಿ ಸ.ಅ ರವರ ಬಳಿ ತೆರಳಿ ಹೇಳುತ್ತಾರೆ. ಓ ಪ್ರವಾದಿವರ್ಯರೇ... ತಮ್ಮ ಮೇಲೆ ಇಂತಿಂತಹ ಊರಿನ ಒಬ್ಬನು ಸ್ವಲಾತ್ ಹೇಳಿದ್ದಾನೆ. ಆ ಸ್ವಲಾತಿನ ಕಾರಣದಿಂದ ಅಲ್ಲಾಹು ನನ್ನನ್ನು ಸ್ರಷ್ಟಿಸಿದ್ದಾನೆ. ಅಲ್ಲಾಹನ ಮಹಾತ್ಮರು ಹೇಳುತ್ತಾರೆ. ಮುಂದೆ ಆ ಮಲಕುಗಳ ಕಾಯಕ ಒಂದೇಯಾಗಿರುತ್ತದೆ. ಆ ಸ್ವಲಾತ್ ಹೇಳಿದ ಮನುಷ್ಯನಿಗಾಗಿ ಅಂತ್ಯ ದಿನದ ತನಕ ಆತನ ಪಾಪ ವಿಮೋಚನಿಗಾಗಿ ಬೇಡುವುದು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಭಾಗವಾಗಿ ಖತ್ಮುಲ್ ಕುರಾನ್ ಇಜ್ತಿಮಾ, ತಹ್ಲೀಲ್ ಮಜ್ಲಿಸ್ ಹಾಗು ಪ್ರಾರ್ಥನಾ ಸಂಗಮ ನಡೆಯಿತು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ಅಧ್ಯಕ್ಷರಾದ ಇಲ್ಯಾಸ್ ಸಖಾಫಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್, ಸೆಂಟರ್ ಕೋಶಾಧಿಕಾರಿ ಇಸಾಕ್ ಪೇಟೆ, ತೊಕ್ಕೋಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಅಳೇಕಲ, ಸಿರಾಜ್ ಉಸ್ತಾದ್ ಚಾಲಿಯಂ, ಶಮೀರ್ ಸೇವಂತಿಗುಡ್ಡೆ, ಎಸ್ ವೈ ಎಸ್ ಸೆಂಟರ್ ಜೊತೆ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಸೆಂಟರ್ ಉಪಾಧ್ಯಕ್ಷ ಹೈದರ್ ಮುಕ್ಕಚ್ಚೇರಿ, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯ ಸಯೀದ್ ಮಂಚಿಲ, ಉಳ್ಳಾಲ ಸೆಕ್ಟರ್ ಕೋಶಾಧಿಕಾರಿ ಶಬೀರ್ ಪೇಟೆ ಹಾಗು ಇನ್ನಿತರ ಎಸ್ ವೈ ಎಸ್, ಎಸ್ಸೆಸ್ಸೆಫ್ ಗಣ್ಯರು ಉಪಸ್ಥಿತರಿದ್ದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಸ್ವಾಗತಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ.ಜಿ ಹನೀಫ್ ಹಾಜಿ ಧನ್ಯವಾದಗೈದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗ ಚೇಯರ್ ಮಾನ್ ಅಲ್ತಾಫ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.
ವರದಿ : ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Comments